ಯಲ್ಲಾಪುರ: ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಕುಮಾರವ್ಯಾಸ ಜಯಂತಿಯನ್ನು ಶಿರಸಿ ರಸ್ತೆಯ ಸಂಸ್ಕೃತಿ ನಿವಾಸದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾ ಶಂಕರ ಅವರ ಮಾರ್ಗದರ್ಶನದಲ್ಲಿ ಗಾಯತ್ರಿ ಬೋಳಗುಡ್ಡೆ, ಸರೋಜಾ ಪ್ರಶಾಂತ್ ಹೆಗಡೆ, ಶಂಕರ್ ಭಟ್ಟ, ಆಶಾ ರವಿ ಬಗನಗದ್ದೆ, ಅಂಬಿಕಾ ಭಟ್ಟ ಮೊದಲಾದವರು ಕುಮಾರವ್ಯಾಸ ಭಾರತದ ಸುಪುತ್ರ ಕಲ್ಯಾಣ ಜರಾಸಂಧ ಭಾಗದ ಆಯ್ದ ಪದ್ಯಗಳನ್ನು ಸುಂದರವಾಗಿ ವಾಚಿಸಿದರು. ಜಾನವಿ ಎಸ್ ಮಣ್ಮನೆ, ರಚನಾ ಹೆಗಡೆ, ವಿಜಯಶ್ರೀ ಹೆಗಡೆ, ಸಂದ್ಯ ಕೊಂಡದಕುಳಿ, ಮಮತಾ ಪ್ರಕಾಶ್ ,ಮೊದಲಾದವರು ಪದ್ಯಗಳನ್ನು ಸಮರ್ಥವಾಗಿ ವ್ಯಾಖ್ಯಾನಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಈ ಸಂದರ್ಭದಲ್ಲಿ ಎಂ.ಎನ್. ಹೆಗಡೆ ಹಳವಳ್ಳಿ,, ಪ್ರಮೋದ ಹೆಗಡೆ, ಶಾಂತಲಾ ಹೆಗಡೆ, ಮಾದೇವಿ ಭಟ್ಟ, ಶೈಲಶ್ರೀ ಭಟ್ಟ, ಆಶಾ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.
Adv
Monday, 20 January 2025
ಹುಬ್ಬಳ್ಳಿಯಿಂದ ಕುಂಭಮೇಳಕ್ಕೆ ವಿಶೇಷ ರೈಲು ಸೇವೆ: ಭಕ್ತರಿಗೆ ಸುಲಭ ಪ್ರಯಾಣ
ಯಲ್ಲಾಪುರ: ಕುಂಭಮೇಳದ ಸಂದರ್ಭದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ರೈಲ್ವೆ ಇಲಾಖೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ. ಈ ಸೇವೆಯು ಹುಬ್ಬಳ್ಳಿಯಿಂದ ಕುಂಭಮೇಳಕ್ಕೆ ತೆರಳುವ ಭಕ್ತರಿಗೆ ಸುಲಭ ಪ್ರಯಾಣವನ್ನು ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿದೆ. ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಉತ್ತರ ಪ್ರದೇಶದ ತುಂಡ್ಲಾ ನಡುವೆ ಎರಡು ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಈ ರೈಲುಗಳು ಧಾರವಾಡ, ಬೆಳಗಾವಿ, ಪುಣೆ, ಜಬಲ್ಪುರ್, ಪ್ರಯಾಗರಾಜ್ ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ ನಿಲ್ಲಲಿವೆ. ರೈಲು ಸಂಖ್ಯೆ 07379 ಹುಬ್ಬಳ್ಳಿಯಿಂದ ತುಂಡ್ಲಾಕ್ಕೆ ಜನವರಿ 20 ಮತ್ತು ಫೆಬ್ರವರಿ 6 ರಂದು ಹೊರಡಲಿದೆ. ರೈಲು ಸಂಖ್ಯೆ 07380 ತುಂಡ್ಲಾದಿಂದ ಹುಬ್ಬಳ್ಳಿಗೆ ಜನವರಿ 23 ಮತ್ತು ಫೆಬ್ರವರಿ 9 ರಂದು ಹೊರಡಲಿದೆ. ಈ ರೈಲುಗಳಲ್ಲಿ ಎಸಿ 2 ಟೈರ್, ಎಸಿ 3 ಟೈರ್, ಸ್ಲೀಪರ್ ಕ್ಲಾಸ್ ಮತ್ತು ಸೆಕೆಂಡ್ ಕ್ಲಾಸ್ ಸೇರಿದಂತೆ ವಿವಿಧ ರೀತಿಯ ಬೋಗಿಗಳನ್ನು ಹೊಂದಿರುತ್ತವೆ.
ಪ್ರಯಾಣಿಕರು ರೈಲಿನ ನಿಖರವಾದ ಸಮಯ, ನಿಲ್ದಾಣಗಳ ವಿವರಗಳನ್ನು ತಿಳಿಯಲು ಭಾರತೀಯ ರೈಲ್ವೆ ಜಾಲತಾಣ www.enquiry.indianrail.gov.in ಗೆ ಭೇಟಿ ನೀಡಬಹುದು ಅಥವಾ 139 ಸಹಾಯವಾಣಿಗೆ ಕರೆ ಮಾಡಬಹುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಕುಂಭಮೇಳವು ಹಿಂದೂ ಧರ್ಮದ ಅತ್ಯಂತ ಪವಿತ್ರವಾದ ಮಹಾಕುಂಭಗಳಲ್ಲಿ ಒಂದಾಗಿದೆ. 12 ವರ್ಷಗಳಿಗೊಮ್ಮೆ ನಡೆಯುವ ಈ ಮೇಳದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಯಲ್ಲಾಪುರದ ಜನರು ಹುಬ್ಬಳ್ಳಿಯಿಂದ ಕುಂಭಮೇಳಕ್ಕೆ ವಿಶೇಷ ರೈಲು ಸಿಗುತ್ತಿರುವುದರಿಂದ ಸಂತೋಷಗೊಂಡಿದ್ದಾರೆ. ಈ ರೈಲು ಸೇವೆಯಿಂದ ಭಕ್ತರಿಗೆ ಪ್ರಯಾಣ ಸುಲಭವಾಗಿದೆ ಎಂದು ತಿಳಿದುಬಂದಿದೆ.